ಯಕ್ಷಮಿತ್ರದ ದ್ವಿತೀಯ ಹೆಜ್ಜೆ ರಂಗ ನಾಯಕ ಕುರಿಯ
ಲೇಖಕರು : ಲಕ್ಷ್ಮಿ ಮಚ್ಚಿನ
ಶನಿವಾರ, ಒಕ್ಟೋಬರ್ 31 , 2015
|
ಒಕ್ಟೋಬರ್ 31, 2015
|
ಯಕ್ಷಮಿತ್ರದ ದ್ವಿತೀಯ ಹೆಜ್ಜೆ ರಂಗ ನಾಯಕ ಕುರಿಯ
ಸಮರ್ಥ ರಂಗನಿರ್ದೇಶನದ ಮೂಲಕ ಯಕ್ಷಗಾನದಲ್ಲಿ ಸ್ಥಾಯಿ ಯಾದವರು ಕುರಿಯ ಗಣಪತಿ ಶಾಸ್ತ್ರಿಗಳು. ಪ್ರಸಿದ್ಧ ಕುರಿಯ ಮನೆತನದ ಖ್ಯಾತಿ ಇವರಿಂದಾಗಿ ಇನ್ನಷ್ಟು ಜನ ಮಾನಸಕ್ಕೆ ಹತ್ತಿರವಾಯಿತು. ಕುರಿಯ ಭಾಗವತರು ಎಂದಾಕ್ಷಣ ಮೈ ನವಿರೇಳಲು ಕಾರಣ ರಂಗದಲ್ಲಿ ಅವರು ಪಾತ್ರಧಾರಿಯ ಜತೆಗೆ ಸಾಧಿಸುವ ಸಂವಹನ. ಅವರ ಹಾಡುಗಾರಿಕೆಯ ಏರು ಸ್ವರ, ಇಂಪು ಇತ್ಯಾದಿಗಳದ್ದು ಒಂದು ಕತೆಯಾದರೆ ಅವರು ವೇಷ ಧಾರಿಗೆ ನೀಡುವ ಪ್ರೋತ್ಸಾಹವೇ ಇನ್ನೊಂದು ಬಗೆ. ಅದು ಎಷ್ಟೋ ಪ್ರಸಿದ್ಧ ವೇಷಧಾರಿಗಳನ್ನು ಸಿದ್ಧ ಗೊಳಿಸಿದ ಉದ್ಗಾರಗಳ ಝೇಂಕಾರ. ಕಲಾವಿದನಿಗೆ ಸಂಭಾಷಣೆಯನ್ನು ಕೂಡ ರಂಗ ದಲ್ಲಿಯೇ ಹೇಳಿ ಕೊಟ್ಟದ್ದಿದೆ. ಸಮರ್ಥ ರಂಗ ನಿರ್ದೇಶಕ ಎನಿಸಿಕೊಂಡ ಕುರಿಯ ಗಣಪತಿ ಶಾಸ್ತ್ರಿಗಳ ಕುರಿತು ಯಕ್ಷಮಿತ್ರ ನಮ್ಮ ವೇದಿಕೆ ವಾಟ್ಸಾಪ್ ಗ್ರೂಪ್ ಯಕ್ಷ ಸತ್ಸಂಗ 2 ಹೆಸರಿನಲ್ಲಿ ನ.2ರಂದು ಕಟೀಲಿನಲ್ಲಿ ರಂಗ ನಾಯಕ ಕುರಿಯ
ಕಾರ್ಯಕ್ರಮ ಹಮ್ಮಿಕೊಂಡಿದೆ.
ಯಕ್ಷಮಿತ್ರ ವೇದಿಕೆಯಿಂದ ಇದು ಎರಡನೆಯ ದೊಡ್ಡ ಹೆಜ್ಜೆ. ಕೆಎಂಸಿ, ಮಂಗಳೂರಿನ ಬಿಡುವಿಲ್ಲದ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತರು ಪ್ರಾರಂಭಿಸಿದ ಯಕ್ಷಮಿತ್ರ ವಾಟ್ಸಾಪ್ ಗ್ರೂಪ್ಗ್ಳ ಸಂಖ್ಯೆ ಇದೀಗ ನಾಲ್ಕಾಗಿ ಬೆಳೆದಿದೆ, ಸದಸ್ಯರ ಸಂಖ್ಯೆ 400 ಭರ್ತಿಯಾಗಿದೆ. ಕೇವಲ ಯಕ್ಷಗಾನ ಕಲೆಗೆ ಮೀಸಲಾದ ಈ ಗ್ರೂಪಿನಲ್ಲಿ ಶುಭೋದಯ ಹಾಕುವುದಾದರೂ ಯಕ್ಷಗಾನದ ಭಾವ ಚಿತ್ರ, ಹಾಡಿನ ಮೂಲಕವೇ. ಅನೇಕ ಬರಹಗಾರರಿಗೆ ಈ ಗ್ರೂಪ್ ವೇದಿಕೆ. ಈ ಹಿಂದೆ ಕಟೀಲಿನಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿ ದಾಖಲೆ ಸಂಖ್ಯೆಯ ಪ್ರೇಕ್ಷಕರಿಗೆ ರಸದೌತಣ ಬಡಿಸಿದ ಖ್ಯಾತಿ ಇದಕ್ಕಿದೆ.
ಕಟೀಲು ರಥಬೀದಿಯ ವೇದಿಕೆಯಲ್ಲಿ ಗಣಪತಿ ಶಾಸ್ತ್ರಿಗಳಿಗೆ ಸಮ್ಮಾನ, ಮಂಜುನಾಥ್ ಭಟ್ ಬೆಳ್ಳಾರೆ ಬರೆದ ಸತೀ ಹೈಮವತೀ, ಗಣಪತಿ ಕೌತುಕ ಎಂಬ ಪ್ರಸಂಗಗಳ ಬಿಡುಗಡೆ ನಡೆಯಲಿದೆ. ಪಂಚವಟಿ, ಮಕರಾಕ್ಷ, ಇಂದ್ರಜಿತು, ಮಹಿರಾವಣ ಬಯಲಾಟ ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ. ಸಮಿತಿಯ ಗೌರವಾಧ್ಯಕ್ಷರಾಗಿ ಹರಿನಾರಾಯಣ ದಾಸ ಆಸ್ರಣ್ಣರು, ಕಾರ್ಯಾಧ್ಯಕ್ಷರಾಗಿ ಡಾ| ಪದ್ಮನಾಭ ಕಾಮತ್, ಕಾರ್ಯದರ್ಶಿಯಾಗಿ ಎಂ. ಶಾಂತಾರಾಮ ಕುಡ್ವ, ಕೋಶಾಧಿಕಾರಿಯಾಗಿ ನಾಗೇಶ್ ಕೆ. ಎಸ್. ಆಚಾರ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃಪೆ :
udayavani
|
|
|